- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಹಾವೇರಿ: ಕಥೆಗಾರನಿಗೆ ವಿಷಯ ಆಯ್ಕೆ ಅತಿ ಮುಖ್ಯ. ಕಥೆ ಹೇಳುವ ಸಂದರ್ಭಗಳು ಸೌಂದರ್ಯಪ್ರಜ್ಞೆಯಿಂದ ಕೂಡಿರಬೇಕು. ಜೊತೆಗೆ ಅಂತರ್ದೃಷ್ಟಿ ಹಾಗೂ ಲೋಕದೃಷ್ಟಿ ಸಂವೇದನೆ ಮೂಲಕ ಸಮಾಧಾನ ಭಾವದಿಂದ ಕಥೆ ಬರೆದವರು ಮಾತ್ರ ಕಥೆಗಾರ ಆಗಿ ಉಳಿಯಬಲ್ಲರು ಎಂದು ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ.ಭಾಸ್ಕರ್ ಅಭಿಪ್ರಾಯ ಪಟ್ಟರು.
ನಗರದ ಗೆಳೆಯರ ಬಳಗದ ಶಾಲಾ ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಅರಳಿಕಟ್ಟಿ ಪ್ರಕಾಶನ ಹಾಗೂ ಸಾಹಿತಿ ಕಲಾವಿದರ ಬಳಗದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಬಿಂಬ-ಪ್ರತಿಬಿಂಬಗಳು ಕಥಾ ಸಂಪುಟ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಭಾಷೆ, ಧರ್ಮ, ಜಾತಿ ಮೀರಿದ ಬರಹಗಾರ ಅದ್ಭುತ ಬರವಣಿಗೆ ಸೃಷ್ಟಿಸಬಲ್ಲ. ಬರಹಗಾರ ಸಮುದಾಯ ಪ್ರಜ್ಞೆಯ ಭಾವದೊಂದಿಗೆ ಸಾರ್ವತ್ರಿಕ ಸತ್ಯದ ವಿಷಯಕ್ಕೆ ಆದ್ಯತೆ ನೀಡಬೇಕು. ಸಾಹಿತಿಗಳಿಗೆ, ಹೋರಾಟಗಾರರಿಗೆ ಸ್ವಾಭಿಮಾನದ ಕಿಡಿ ಹೊತ್ತಿಸಿದ ಅಗ್ರಶ್ರೇಣಿಯಲ್ಲಿರುವ ಹಾವೇರಿ ಜಿಲ್ಲೆಯ ಸಾಹಿತ್ಯ ಲೋಕ ವಿಭಿನ್ನವಾದದ್ದು. ಈ ಹಿನ್ನೆಲೆಯಲ್ಲಿ ಉದಯೋನ್ಮುಖ ಬರಹಗಾರರು ಇತ್ತ ಲಕ್ಷ್ಯಕೊಡುವುದು ಅವಶ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ ಮಾತನಾಡಿ, ಹಾವೇರಿಯಲ್ಲಿ ಜರುಗಿದ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಾರ್ಥ ಪ್ರಕಟವಾಗಿರುವ ಬಿಂಬ-ಪ್ರತಿಬಿಂಬಗಳು ಕಥಾ ಸಂಪುಟ ಹಿರಿಯ ಮತ್ತು ಕಿರಿಯ ಬರಹಗಾರರಿಗೆ ಅವಕಾಶ ನೀಡಿದೆ. ಈ ಮೂಲಕ ಜಿಲ್ಲೆಯಲ್ಲಿ ಜರುಗುವ ಸಾಹಿತ್ಯಿಕ ಚಟುವಟಿಕೆಗಳಿಗೆ ಮಾದರಿಯಾಗಿದೆ. ಈ ಪರಂಪರೆಯನ್ನು ಮುಂದುವರೆಸಿಕೊAಡು ಹೋಗುವ ಹೊಣೆಗಾರಿಕೆ ನವಪೀಳಿಗೆ ಮೇಲಿದೆ ಎಂದರು.
ಕಥಾ ಸಂಪುಟ ಬಿಂಬ ಭಾಗದ ಕುರಿತು ಮಾತನಾಡಿದ ಲೇಖಕ ಲಿಂಗರಾಜ ಸೊಟ್ಟಪ್ಪನವರ, ಬದುಕಿನ ಚಳುಕು ಮೀರಿದರೆ ಮಾತ್ರ ಕಥೆ ಉಳಿಯುತ್ತದೆ. ಮೌಲಿಕ ಬರಹ ರೂಢಿಗತ ಮಾಡಿಕೊಂಡರೆ ಕಥಾ ಸಾಹಿತ್ಯ ಮುಂಚೂಣಿಯಲ್ಲಿರುತ್ತದೆ. ಬಿಂಬ ಭಾಗದಲ್ಲಿನ ಕಥೆಗಳು ಬದುಕಿನ ವಿವಿಧ ಮಜಲುಗಳನ್ನು ಅನಾವರಣಗೊಳಿಸುತ್ತವೆ ಎಂದರು.
ನಮ್ಮ ಜಿಲ್ಲೆಯಲ್ಲಿ ಜರುಗಿದ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣೆಗೆ ಪ್ರಕಟಿಸಿರುವ ಬಿಂಬ-ಪ್ರತಿಬಿಂಬಗಳು ಕಥಾ ಸಂಪುಟಕ್ಕೆ ಮಾಡಿದ ಸಾಂಘಿಕ ಕೆಲಸ ಆಪ್ತತೆ ಹಾಗೂ ಸಂತೃಪ್ತ ಭಾವ ನೀಡಿದೆ. ಕಥೆಗಾರರು ಸಹಿತ ತಮ್ಮ ಕಥೆಗಳ ಮೂಲಕ ಭರವಸೆ ಮೂಡಿಸಿದ್ದಾರೆ. ನಮ್ಮ ಉದ್ದೇಶವೂ ಇದೇ ಆಗಿತ್ತು. ಅದೀಗ ಈಡೇರಿದೆ.
ಭಾಷೆಯನ್ನು ಬಳಸಿಕೊಳ್ಳುವ ಹಾಗೂ ದುಡಿಸಿಕೊಳ್ಳುವ ವಿಚಾರವನ್ನು ಉತ್ತರ ಕರ್ನಾಟಕ ಭಾಗದವರಿಗೆ ಹೇಳಿಕೊಡಬೇಕಿಲ್ಲ. ಆದರೆ ಕಥಾ ಸಂಪುಟದಲ್ಲಿ ಪ್ರತಿಬಿಂಬಗಳ ರೀತಿಯಲ್ಲಿ ಉದಯೋನ್ಮುಖ ಬರಹಗಾರರು ತಮ್ಮ ಭಾಷಾ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು. ವ್ಯಾಕರಣ ಬದ್ಧವಾಗಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಕಥಾ ವಿಷಯ ಎಷ್ಟು ಮುಖ್ಯವೋ ಅದನ್ನು ಅಭಿವ್ಯಕ್ತಿಸುವ ಮಾರ್ಗವೂ ಅಷ್ಟೇ ಮುಖ್ಯ.
ತಾಲೂಕು ಕಸಾಪ ಅಧ್ಯಕ್ಷ ವೈ.ಬಿ. ಆಲದಕಟ್ಟಿ, ವಿ.ಎಂ. ಪತ್ರಿ, ಮಾರುತಿ ಶಿಡ್ಲಾಪುರ, ಡಾ.ಮಲ್ಲಿಕಾರ್ಜುನ ಮಾನ್ಪಡೆ, ವಿ.ಪಿ.ದ್ಯಾಮಣ್ಣವರ, ಪರಿಮಳಾ ಜೈನ್, ಪೃಥ್ವಿರಾಜ್ ಬೆಟಗೇರಿ, ಜುಬೇದಾ ನಾಯಕ, ರೇಣುಕಾ ಗುಡಿಮನಿ, ರಾಜೇಂದ್ರ ಹೆಗಡೆ, ಚಂದ್ರಶೇಖರ ಮಾಳಗಿ. ಎಸ್.ಎಂ. ಬಡಿಗೇರ, ನೇತ್ರಾವತಿ ಅಂಗಡಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಡಾ.ಗುಹೇಶ್ವರ ಪಾಟೀಲ, ಗೂಳಪ್ಪ ಅರಳಿಕಟ್ಟಿ, ವಾಗೀಶ ಹೂಗಾರ ಹಾಗೂ ಸತೀಶ ಎಂ.ಬಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಎಸ್.ಆರ್. ಹಿರೇಮಠ ಸ್ವಾಗತಿಸಿದರು. ಡಾ.ಜಗನ್ನಾಥ ಗೇನಣ್ಣವರ ನಿರೂಪಿಸಿದರು. ಕರಿಯಪ್ಪ ಹಂಚಿನಮನಿ ವಂದಿಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ